Passion of the 'Self': Me @ Blogspot

Mahesha Elliadka blogs here...

Friday, October 5, 2007

ಮದುವೆಗೆ ಬೇಡದ ಹಿರಿಯರು ಸೀಮಂತಕ್ಕೇಕೆ?

ಫೆಬ್ರವರಿ ೩, ೨೦೦೭ ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಐತಿಹಾಸಿಕ ದಿವಸ. ತುಕ್ಕು ಹಿಡಿದ ಆಡಳಿತ ಯಂತ್ರದ ಪುನರ್ರಚನೆಯ ಆಶಾಭಾವ ಮೂಡಿದ ದಿನ. ವಿಧಾನಸೌಧ ಎಂದರೆ ವೃದ್ಧರಿಗೆ ಮಾತ್ರ ಎಂದು ರೋಸಿಹೋಗಿದ್ದ ಅದೆಷ್ಟೋ ಕನ್ನಡಿಗರಿಗೆ ಸಮಾಧಾನ ತಂದ ದಿನ. ಯುವ ರಾಜಕಾರಣಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅನೇಕ ಕ್ರಾಂತಿಕಾರಿ ಬೆಳವಣಿಗೆಗಳು ಆರಂಭವಾಗಲು ಕಾರಣರಾದರು. ಜನತಾದರ್ಶನ, ಗ್ರಾಮವಾಸ್ತವ್ಯ ದಂತಹ ಅನೇಕ ಸದಭಿರುಚಿಯ ಕಾರ್ಯಕ್ರಮಗಳಿಂದಾಗಿ ಕನ್ನಡಿಗರ ಮನ ಮುಟ್ಟಿದ್ದರು. ಪಕ್ಷಾತೀತವಾಗಿ ಕೊಂಡಾಡುವಂತಹ ಬದಲಾವಣೆಯನ್ನು ತಂದಿದ್ದರು. ಮುಖಭಾವ ಎಂದರೆ ಏನೆಂದೇ ತಿಳಿಯದ, ಗುಲ್ಬರ್ಗದಲ್ಲಿ ಉರ್ದುವಿನಲ್ಲಿ ಭಾಷಣ ಮಾಡುತ್ತಿದ್ದ ಧರಂಸಿಂಗ್ ನಂತಹ ಮುಖ್ಯಮಂತ್ರಿಗಳ ನಂತರದ ದಿನಗಳಲ್ಲಿ ಇವರು ತಮ್ಮ ನಗುಮುಖದಿಂದ ಕನ್ನಡಿಗರಿಗೆ ಅಚ್ಚುಮೆಚ್ಚಿನವರಾಗಿದ್ದರು. ಬಿ.ಜೆ.ಪಿ ಯೊಂದಿಗೆ ೨೦:೨೦ ರ ಒಪ್ಪಂದವನ್ನು ಮಾಡಿಕೊಂಡು ರಾಜ್ಯಸರಕಾರದ ಸಾರಥ್ಯವನ್ನು ವಹಿಸಿಕೊಂಡ ಸಂದರ್ಭದಲ್ಲಿ ಜೆ.ಡಿ.ಎಸ್ ನ ಸರ್ವಾಧಿಕಾರಿ ಶ್ರೀ ದೇವೇಗೌಡರನ್ನೇ ಎದುರು ಹಾಕಿಕೊಂಡಿದ್ದರು. ಆ ಮೂಲಕ ರಾಜಕೀಯದಲ್ಲಿ ತಮ್ಮ ಕುಟುಂಬ ರಾಜಕೀಯದಿಂದ ಪ್ರತ್ಯೇಕವಾಗಿ ಕಂಡರು, ಎಲ್ಲರ ಮೆಚ್ಚುಗೆಗೂ ಪಾತ್ರರಾಗಿದ್ದರು.

ಅಂದು ಎಲ್ಲಾ ಸರಿ. ಆದರೆ ಇಂದು? ಮೈತ್ರಿಯ ಕಾಲದಲ್ಲಿ ಪಕ್ಷದ, ಮನೆಯ ಹಿರಿಯರನ್ನು ಮರೆತು ದೂರದ ಗೋವಾದ ರೆಸಾರ್ಟ್ ನಲ್ಲಿ ನಿರ್ಧಾರ ಕೈಗೊಂಡ ಮುಖ್ಯಮಂತ್ರಿಗಳಿಗೆ ಪಟ್ಟ ಸಿಗುವ ಸ್ಪಷ್ಟ ಗುರಿ ಇತ್ತು, ನಿರ್ದಿಷ್ಟ ಆಸೆ ಇತ್ತು. ೨೦ ತಿಂಗಳು ಕಳೆದ ಈ ದಿನಗಳಲ್ಲಿ ತಮ್ಮ ಸ್ಠಾನಕ್ಕೆ ಚ್ಯುತಿ ಬರುವ ಸಮಯದಲ್ಲಿ ಹಿರಿಯರ ಆಸರೆ ಬೇಕಾಗಿದೆ. ಮೈತ್ರಿ ಕಾಲದಲ್ಲಿ ಬೇಡದ ಹಿರಿಯರ ಸಲಹೆ ಹಸ್ತಾಂತರದ ಹೊತ್ತಿನಲ್ಲಿ ಬೇಕಾಗಿದೆ. ಇಂದು ೨೦ ತಿಂಗಳಲ್ಲಿ ಆ ೨ ಪಕ್ಷಗಳ ಸಂಬಂಧ ಬಲಿತಿದೆ, ಬಲಿತು ಹಳಸಿದೆ. ಹಾಗಾಗಿ ಮೊದಲಿನ ಉನ್ಮಾದವಿಲ್ಲದಾಗಿದೆ. ರಾಜ್ಯಹಿತಕ್ಕಿಂತ ಪಕ್ಷಹಿತ, ಸ್ವಹಿತವು ಆಪ್ತವಾಗಿದೆ. ರಾಜಕಾರಣದಲ್ಲಿ ನಂಬಿಕೆ ಎಂಬ ಪದಕ್ಕೆ ಸ್ಥಾನವಿಲ್ಲ ಎಂದು ಮತ್ತೊಮ್ಮೆ ಸಾಬೀತು ಮಾಡಿ ತೋರಿಸಿದ್ದಾರೆ. ಮನೆಯವರ ವಿರೋಧದಲ್ಲಿ ಪ್ರೀತಿಸಿ ಸಂಸಾರ ಮಾಡುವ ಹುಡುಗನೊಬ್ಬನಿಗೆ ಸೀಮಂತದ ಕಾಲದಲ್ಲಿ ಹಿರಿಯರ ನೆನಹು ಬಂದಂತೆ ಈಗ ತಂದೆಯ ನೆರಳಿನೊಳಕ್ಕೆ ಪುನಃ ಪ್ರವೇಶಿಸುತ್ತಿದ್ದಾರೆ ನಮ್ಮ ಮುಖ್ಯ ಮಂತ್ರಿಗಳು. ಏನಂತೀರಿ...?



~~

Labels: ,

1 Comments:

Anonymous Anushree said...

ಹೌದು. ಸತ್ಯವಾದ ಮಾತು. ಅತ್ತಲಿನವರೂ ಅಷ್ಟೆ. ಅಂದು ಈ ಬಗ್ಗೆ ಬಲವಾದ ವಿರೋಧ ವ್ಯಕ್ತಪಡಿಸಿ, ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳ ಹೋದವರು, ಇಂದು ವಿನಾ ಕಾರಣ ಮೂಗುತೂರಿಸುತ್ತಿದ್ದಾರೆ. ಆವತ್ತು ತಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲವೆಂದವರು ಇವತ್ತು ತಮ್ಮದೇ ಆದ ಷರತ್ತುಗಳನ್ನು ಹಾಕುತ್ತಾ, ಅದರಂತೆಯೇ ಆಗಬೇಕೆಂದು ಒತ್ತಡ ಹೇರುತ್ತಿದ್ದಾರಲ್ವೆ? ಅಧಿಕಾರದ ಪ್ರಶ್ನೆ ಬಂದಾಗ ಇಲ್ಲದ ಸಂಬಂಧವೂ ಅದೆಲ್ಲಿಂದಲೋ ಬೆಸೆದುಬಂದುಬಿಡುತ್ತದೇನೊ...

October 5, 2007 at 10:45 AM  

Post a Comment

Subscribe to Post Comments [Atom]

<< Home